canaratvnews

*ವಂಶಾವಳಿ ತಿಳಿಯುವುದು ಕುತೂಹಲಕ್ಕೆ ಮಾತ್ರ ಅಗತ್ಯ: ವಂಶಾವಳಿ ತಜ್ಞ ಡಾ. ಮೈಕಲ್ ಲೋಬೊ*

ಮಂಗಳೂರು: “ಕ್ರೈಸ್ತ ವಂಶಾವಳಿಯನ್ನು ತಿಳಿಯಲು ಚರ್ಚ್ ದಾಖಲೆಗಳು ಸಹಕಾರಿಯಾಗುತ್ತವೆ. ಆದರೆ ಇದೊಂದು ಕುತೂಹಲ ತಣಿಸುವ ಕೆಲಸವಷ್ಟೇ ಹೊರತು ಬೇರೆ ಹೆಚ್ಚಿನ ಉಪಯೋಗ ಕಾಣಿಸುವುದಿಲ್ಲ” ಎಂದು ವಂಶಾವಳಿ ತಜ್ಞ ಡಾ. ಮೈಕಲ್ ಲೋಬೊ ಅಭಿಪ್ರಾಯಪಟ್ಟರು.

ಕೊಂಕಣಿ ಭಾಷಾ ಮಂಡಳ್ ಕರ್ನಾಟಕ (ರಿ.) ಇದರ 52ನೇ ಸ್ಥಾಪನಾ ದಿನಾಚರಣೆಯ ಪ್ರಯುಕ್ತ ಕಾರ್‌ಸ್ಟ್ರೀಟ್‌ನ ಬಿಇಎಮ್ ಸ್ಕೂಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ವಂಶಾವಳಿ’ ಕಾರ್ಯಕ್ರಮದಲ್ಲಿ ಅವರು ಪ್ರಮುಖ ಭಾಷಣಕಾರರಾಗಿ ಮಾತನಾಡುತ್ತಿದ್ದರು. ಸಾವಿರಾರು ಪುಟಗಳ ವಂಶಾವಳಿ ಸಂಶೋಧನಾ ಪುಸ್ತಕ ಪ್ರಕಟಿಸಿರುವ ಅವರು, ಈ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ವಿದೇಶಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಜ್ರೋದ್ಯಮಿ ಎಸ್. ಎಲ್. ಪ್ರಶಾಂತ್ ಶೇಟ್ ಮಾತನಾಡಿ, ಕೊಂಕಣಿ ಭಾಷಾ ಮಂಡಳವು ಇಂತಹ ವಿಭಿನ್ನ ಕಾರ್ಯಕ್ರಮಗಳ ಮೂಲಕ ಸಮುದಾಯದ ಅಗತ್ಯಗಳನ್ನು ಪೂರೈಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ರೇಮಂಡ್ ಡಿಕೂನಾ ತಾಕೊಡೆ ಮಾತನಾಡಿ, “ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿರುವ ಕೊಂಕಣಿ ಭಾಷಾ ಮಂಡಳಗಳು ಕೊಂಕಣಿ ಚಳವಳಿಯ ಆಧಾರಸ್ತಂಭಗಳು. ಹಿಂದೆ ಎಂಟನೇ ಪರಿಚ್ಛೇದದ ಮಾನ್ಯತೆಗಾಗಿ ಹೋರಾಡಿದ್ದೆವು, ಈಗ ಕೊಂಕಣಿ ಭವನ ಮತ್ತು ಎಂ.ಎ ಪದವಿಗಾಗಿ ಚಳವಳಿ ನಡೆಸಲು ಸಿದ್ಧರಿದ್ದೇವೆ” ಎಂದರು.

ಮುಖ್ಯ ಅತಿಥಿ ಜೋನ್ ಎ. ತಾವ್ರೊ ಕಾಮತ್ ಶುಭ ಹಾರೈಸಿದರು. ನೊಯೆಲ್ ತಾವ್ರೊ ಅವರು ತೌರೊ ಕುಟುಂಬದ ವಂಶಾವಳಿ ಸಂಶೋಧನೆಯ ಬಗ್ಗೆ ವಿವರ ನೀಡಿದರು. ಖಜಾಂಜಿ ವಸಂತ ರಾವ್, ಗೀತಾ ಸಿ. ಕಿಣಿ ಮತ್ತು ಜೂಲಿಯೆಟ್ ಫರ್ನಾಂಡೀಸ್ ಅವರು ಪ್ರಶ್ನೋತ್ತರ ಅವಧಿಯನ್ನು ನಡೆಸಿಕೊಟ್ಟರು.
ಉಪಾಧ್ಯಕ್ಷೆ ಮೀನಾಕ್ಷಿ ಎನ್. ಪೈ ಮತ್ತು ರಾಜ್ಯ ಶಿಕ್ಷಕರ ಸಂಘದ ಉಪಾಧ್ಯಕ್ಷ ಸ್ಟೇನಿ ತೌರೊ ಸಮಾರೋಪ ಭಾಷಣ ಮಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ರಾಬರ್ಟ್ ಮೆನೆಜಸ್ ಸ್ವಾಗತಿಸಿದರು, ಕಾರ್ಯದರ್ಶಿ ಲಿಸ್ಟನ್‌ ಡಿಸೋಜ ವಂದಿಸಿದರು. ಜೊಸ್ಸಿ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.
Share News
Exit mobile version