ಮಂಗಳೂರು:ಕ್ರೈಸ್ತ ಧರ್ಮದ ಅತ್ಯಂತ ಪವಿತ್ರವಾದ ‘ಪವಿತ್ರ ವಾರ’ಕ್ಕೆ ಮಂಗಳೂರಿನ ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರವು ಅತ್ಯಂತ ಭಕ್ತಿಪೂರ್ವಕವಾಗಿ ಚಾಲನೆ ನೀಡಿತು. ಸಾವಿರಾರು ಭಕ್ತಾದಿಗಳ ಸಹಭಾಗಿತ್ವದಲ್ಲಿ ಕಾರ್ಮೆಲ್ ಗುಡ್ಡದಿಂದ ಮರೋಳಿಯ ಪವಿತ್ರ ಬೆಟ್ಟದವರೆಗೆ (Holy Hill) ನಡೆದ ಭವ್ಯ ಆಧ್ಯಾತ್ಮಿಕ ಪಾದಯಾತ್ರೆಯು ವಿಶ್ವಶಾಂತಿಯ ಸಂದೇಶವನ್ನು ಸಾರಿತು.

ಪುಣ್ಯಕ್ಷೇತ್ರದ ಆವರಣದಿಂದ ಆರಂಭವಾದ ಈ ಯಾತ್ರೆಯಲ್ಲಿ ಸಾವಿರಾರು ಕ್ರೈಸ್ತ ಭಕ್ತಾದಿಗಳು ಪಾಲ್ಗೊಂಡು, ಸುಮಾರು ಎರಡು ಗಂಟೆಗಳ ಕಾಲ ಪ್ರಾರ್ಥನಾಪೂರ್ವಕವಾಗಿ ಸಾಗಿ ಮರೋಳಿಯ ಹೋಲಿ ಹಿಲ್ ತಲುಪಿದರು.
ಈ ಭವ್ಯ ಮೆರವಣಿಗೆಯ ಉದ್ದಕ್ಕೂ ಭಕ್ತರು ಯೇಸುಕ್ರಿಸ್ತರ ಬಂಧನದಿಂದ ಮರಣದವರೆಗಿನ ಅಂತಿಮ ಕ್ಷಣಗಳನ್ನು ನೆನಪಿಸುವ ಶಿಲುಬೆಯ ಹಾದಿಯನ್ನು ಭಕ್ತಿಯಿಂದ ನೆರವೇರಿಸಿದರು. ಭಕ್ತಿ ಮತ್ತು ಏಕತೆಯ ಸಂಕೇತವಾಗಿ ಒಂದು ಬೃಹತ್ ಶಿಲುಬೆಯನ್ನು ಹೊತ್ತು ಸಾಗಿದ ಭಕ್ತರು, ಜಪಸರವನ್ನು ಪಠಿಸುತ್ತಾ ವಿಶೇಷವಾಗಿ ಮಧ್ಯಪ್ರಾಚ್ಯದ ಸಂಘರ್ಷದ ಪರಿಸ್ಥಿತಿಯಲ್ಲಿ ವಿಶ್ವಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದರು.
ಮಂಗಳೂರು ನಗರದ ಮುಖ್ಯ ರಸ್ತೆಯಲ್ಲಿ ಇಂತಹ ಸಾರ್ವಜನಿಕ ಪಾದಯಾತ್ರೆ ನಡೆದಿದ್ದು ಇದೇ ಮೊದಲು ಎಂದು ಹೇಳಲಾಗಿದ್ದು, ಇದು ಭಕ್ತರಲ್ಲಿ ಹೊಸ ಆಧ್ಯಾತ್ಮಿಕ ಜಾಗೃತಿ ಮೂಡಿಸಲು ಕಾರಣವಾಯಿತು.
ಯಾತ್ರೆಯು ಹೋಲಿ ಹಿಲ್ ತಲುಪಿದ ನಂತರ ಸಂತ ಜೋಸೆಫ್ ಆಶ್ರಮದ ಸುಪೀರಿಯರ್ ಫಾ. ಮೆಲ್ವಿನ್ ಡಿಕುನ್ಹಾ ಅವರು ಭಕ್ತರ ಮೇಲೆ ತೀರ್ಥ ಪ್ರೋಕ್ಷಣೆ ಮಾಡಿ ಆಶೀರ್ವದಿಸಿದರು
. ಪುಣ್ಯಕ್ಷೇತ್ರದ ನಿರ್ದೇಶಕ ಫಾ. ಸ್ಟೀಫನ್ ಪೆರೇರಾ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಧರ್ಮಗುರುಗಳಾದ ಫಾ. ದೀಪ್ ಫೆರ್ನಾಂಡಿಸ್ ಹಾಗೂ ವಿವಿಧ ಕಾನ್ವೆಂಟ್ಗಳ ಧರ್ಮಭಗಿನಿಯರು ಉಪಸ್ಥಿತರಿದ್ದರು.