canaratvnews

ಪಿಲಿಕುಳದಲ್ಲಿ ಭತ್ತದ ಕೃಷಿ ಪ್ರಾತ್ಯಕ್ಷಿಕೆ

ಮಂಗಳೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ, ಮಂಗಳೂರು; ಕೃಷಿ ಇಲಾಖೆ, ಮಂಗಳೂರು ಮತ್ತು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ (ರಿ.), ಬಜಪೆ ಇದರ ಸಂಯುಕ್ತ ಆಶ್ರಯದಲ್ಲಿ ಭತ್ತದ ಕೃಷಿಯ ಪ್ರಾತ್ಯಕ್ಷಿಕೆಯ ಕಾರ್ಯಕ್ರಮ ಮಂಗಳವಾರರಂದು ಪಿಲಿಕುಳದ ಗುತ್ತುಮನೆಯ ಎದುರಿನ ಬಾಕಿಮಾರು ಗದ್ದೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀ ಹೊನ್ನಪ್ಪ ಗೌಡ ಇವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡುತ್ತ ನಮ್ಮ ಇಲಾಖೆಯು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ ಇಂತಹ ಅನೇಕ ಕೃಷಿ ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಂಡು ಬಂದಿರುತ್ತೇವೆ. ಪಿಲಿಕುಳದ ಆಯುಕ್ತರ ಆಶಯದಂತೆ ಇಂದು ಪಿಲಿಕುಳದ ಗದ್ದೆಯಲ್ಲಿ ಭತ್ತದ ಕೃಷಿಯ ಪ್ರಾತ್ಯಕ್ಷಿಕೆಯನ್ನು ನಡೆಸುತ್ತಿದ್ದೇವೆ ಎಂದರು.


ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಯಾಂತ್ರೀಕರಣ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಅಬ್ರಹಾಮ್‌ ಎಂ.ಕೆ. ಇವರು ಭತ್ತದ ಸಸಿಮಡಿಯನ್ನು ಪಿಲಿಕುಳದ ಆಯುಕ್ತರಾದ ಡಾ.ಅರುಣ್‌ ಕುಮಾರ್‌ ಶೆಟ್ಟಿಯವರಿಗೆ ಹಸ್ತಾಂತರ ಮಾಡಿದರು. ನಂತರ ಮಾತನಾಡಿದ ಡಾ.ಅರುಣ್‌ ಕುಮಾರ್‌ ಶೆಟ್ಟಿಯವರು ನಾವು ಪಿಲಿಕುಳದ ಗುತ್ತುಮನೆಯ ಎದುರಿನ ಗದ್ದೆಯಲ್ಲಿ ಪ್ರತಿ ವರ್ಷ ಭತ್ತದ ಕೃಷಿಯನ್ನು ಮಾಡಿ ಸಾರ್ವಜನಿಕರಿಗೆ, ಮಕ್ಕಳಿಗೆ ಕೃಷಿಯ ಮಹತ್ವವನ್ನು ತಿಳಿಸಲಾಗುತ್ತಿದೆ ಎಂದರು. ಈ ವರ್ಷ ಕೃಷಿ ಇಲಾಖೆ, ಮಂಗಳೂರು ಮತ್ತು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ಸಂಯುಕ್ತ ಆಶ್ರಯದಲ್ಲಿ ನಡೆಸುತ್ತಿದ್ದೇವೆ ಎಂದು ಹೇಳಿದರು.

ನಂತರ ಗದ್ದೆಯಲ್ಲಿ ನಾಟಿ ಕಾರ್ಯಕ್ರಮವನ್ನು ಡಾ.ಅರುಣ್‌ ಕುಮಾರ್‌ ಶೆಟ್ಟಿಯವರು ನಾಟಿ ಯಂತ್ರವನ್ನು ನಡೆಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಮನೋಜ್‌ ಮಿನೇಜಸ್‌, ಬ್ಯಾಂಕ್‌ ಆಫ್‌ ಬರೋಡ, ವಾಮಂಜೂರು ಇದರ ಮೇನೇಜರ್‌ ಶ್ರೀ ಜಗದೀಶ್‌, ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಮತಿ ವೀಣಾ, ಪಿಲಿಕುಳದ ಸಂಸ್ಕೃತಿ ಗ್ರಾಮದ ಯೋಜನಾಧಿಕಾರಿ ಡಾ.ನಿತಿನ್‌ ಎನ್.ಕೆ. ಮತ್ತಿತರು ಹಾಜರಿದ್ದರು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶ್ರೀ ಗಿರೀಶ್‌ ನಿರೂಪಿಸಿದರು.

ಯೋಜನಾಧಿಕಾರಿ ಶ್ರೀ ಮೋಹನ್‌ ಸ್ವಾಗತಿಸಿ ಶ್ರೀ ಐತಪ್ಪ ಪೂಜಾರಿಯವರು ವಂದಿಸಿದರು. ಪಿಲಿಕುಳದ ಸಸ್ಯಶಾಸ್ತ್ರ ವಿಭಾಗದ ವೈಜ್ಞಾನಿಕ ಅಧಿಕಾರಿ ಶ್ರೀ ರಾಮಕೃಷ್ಣ ಮರಾಟಿ ಸಹಕರಿಸಿದರು.
ಈ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು, ಸ್ವಸಹಾಯ ಸಂಘಗಳ ಸದಸ್ಯರು, ಕೃಷಿಕರು ಮತ್ತು ಪಿಲಿಕುಳದ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.

Share News
Exit mobile version