canaratvnews

ದ ಕ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ಅಭಾವನ್ನು ತ್ವರಿತವಾಗಿ ಬಗೆಹರಿಸುವಂತೆ ಜಿಲ್ಲೆಯ ಬಿಜೆಪಿ ನಿಯೋಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ

ಬೆಂಗಳೂರು ಜುಲೈ 31 :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ಅಭಾವನ್ನು ತ್ವರಿತವಾಗಿ ಬಗೆಹರಿಸುವಂತೆ ಮತ್ತು ಜನಪರ ನೀತಿಯನ್ನು ಜಾರಿಗೊಳಿಸುವಂತೆ ಇಂದು ಜಿಲ್ಲೆಯ ಬಿಜೆಪಿ ನಿಯೋಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಆಗ್ರಹಿಸಲಾಯಿತು.

ಕರ್ನಾಟಕದ ಕರಾವಳಿ ಹಾಗು ಮಲೆನಾಡಿನ ಭಾಗಗಳಲ್ಲಿ ಭೂಮಿಯ ಮೇಲ್ಪದರದಲ್ಲಿ ಗಟ್ಟಿ ಮುರ ಇದ್ದು ಕೃಷಿ ಕಾರ್ಯಗಳನ್ನು ನಿರ್ವಹಿಸಲು ಕಷ್ಟಕರವಾಗಿರುವುದರಿಂದ ಬಹುಕಾಲದಿಂದಲೂ ಕಾರ್ಮಿಕರ ಸಹಾಯದಿಂದ ಅದನ್ನು ಜನಸಾಮಾನ್ಯರ ಉಪಯೋಗಕ್ಕೆ ಇಟ್ಟಿಗೆಯ ರೂಪದಲ್ಲಿ ಕತ್ತರಿಸಿ ತೆಗೆದು ಬಳಸುವುದು ಪ್ರತೀತಿ. ಕಾಲಕ್ರಮೇಣ ಕಾರ್ಮಿಕರ ಅಭಾವ ಉಂಟಾದಾಗ ಈ ಕಾರ್ಯವನ್ನು ಯಂತ್ರದ ಮೂಲಕ ನಿರ್ವಹಿಸಲು ಪ್ರಾರಂಭಿಸಲಾಯಿತು. ಇದೀಗ ರಾಜ್ಯ ಸರಕಾರದ ನಿಯಮಾವಳಿಗಳ ಕಾರಣದಿಂದ ಈ ಪ್ರಕ್ರಿಯೆಯು ಸಂಪೂರ್ಣ ಸ್ಥಗಿತಗೊಂಡಿದೆ. ಇಷ್ಟು ಮಾತ್ರ ವಲ್ಲದೆ ಸರಕಾರದ ಅಸಮರ್ಪಕ ಹಾಗು ಅವೈಜ್ಞಾನಿಕ ಮರಳು ನೀತಿಯಿಂದಾಗಿ ಜಿಲ್ಲೆಯಲ್ಲಿ ಮರಳಿನ ಪೂರೈಕೆಯೂ ಸಾಧ್ಯವಾಗುತ್ತಿಲ್ಲ. ಈ ಎಲ್ಲ ಅವಾಂತರಗಳಿಂದಾಗಿ ದಕ್ಷಿಣ ಕನ್ನಡದಲ್ಲಿ ಸಾಮಾನ್ಯ ಜನರ ಗೃಹ ನಿರ್ಮಾಣ ಕಾರಗಳಾಗಲಿ, ಕೃಷಿ ಸಂಬಂಧಿಸಿದ ಕಾಮಗಾರಿಗಳಾಗಲಿ ಅಥವಾ ಯಾವುದೇ ರೀತಿಯ ಕಟ್ಟಡ ಕಾಮಾಗಾರಿಗಳಾಲಿ ನಡೆಯುತಿಲ್ಲ. ಇದರಿಂದ ಜಿಲ್ಲೆಯ ಆರ್ಥಿಕತೆ ಸ್ಥಬ್ಧಗೊಂಡಿರುವುದಷ್ಟೇ ಅಲ್ಲದೇ, ಈ ಉದ್ಯೋಗವನ್ನು ಹಾಗು ಈ ಸಂಬಂಧಿಸಿದ ಉದ್ಯೋಗಗಳನ್ನು ನಂಬಿರುವ ಸಾವಿರಾರು ಜನರ ಹಾಗು ಕಾರ್ಮಿಕರ ಬದುಕು ಇದೀಗ ಬೀದಿಗೆ ಬಿದ್ದಿದೆ.

ಕೆಂಪು ಮುರ ಕಲ್ಲುಕೋರೆಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ವ್ಯಾಪ್ತಿಗೆ ಸೇರಿಸಿ ಅನಗತ್ಯ ನಿಯಮಗಳ ಮೂಲಕ ಕೋರೆ ಮಾಲಕರಿಗೆ, ಜನಸಾಮಾನ್ಯರಿಗೆ ಹಾಗು ಕಾರ್ಮಿಕರಿಗೆ ಹೊರೆಯಾಗುವಂತೆ ಮಾಡಲಾಗುತ್ತಿದೆ. ಈ ಮೂಲಕ ಪರೋಕ್ಷವಾಗಿ ಪೋಲಿಸ್, ಕಂದಾಯ, ಗಣಿ ಇಲಾಖೆ ಅಧಿಕಾರಿಗಳು ಲಂಚಕ್ಕೆ ಪೀಡಿಸುವಂತಾಗಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಂಪು ಕಲ್ಲು ಕೋರೆ ಕಾರ್ಯವನ್ನು ಗಣಿ ಇಲಾಖೆ ವ್ಯಾಪ್ತಿಯಿಂದ ಹೊರಗಿರಿಸಿ ಸರಳೀಕೃತ ವ್ಯವಸ್ಥೆಯಲ್ಲಿ ಪರವಾನಿಗೆ ನೀಡುವಂತಾಗಬೇಕು.

ಕೇರಳದಲ್ಲಿ 1 ಟನ್ ಕಲ್ಲಿಗೆ ಕೇವಲ 32 ರೂಪಾಯಿಗಳಷ್ಟು ರಾಜಧನ ನಿಗದಿಯಾಗಿದ್ದರೆ ಅದೇ ಪ್ರಮಾಣದ ಕಲ್ಲಿಗೆ ಕರ್ನಾಟಕದಲ್ಲಿ 290 ರೂಪಾಯಿಗಳಷ್ಟು ರಾಜಧನವನ್ನು ಕರ್ನಾಟಕದ ಸರಕಾರ ನಿಗದಿಪಡಿಸಿರುವುದು ಅತ್ಯಂತ ಖೇದಕರ ವಿಷಯವಾಗಿದೆ. ಪರವಾನಿಗೆಯಲ್ಲಿ 1 ಟನ್ ಮುರ ಇಟ್ಟಿಗೆಗೆ ವಿಧಿಸಿರುವ ಮೊತ್ತವು ಶೇ. 96% ಆಗಿದ್ದು ಈ ಮೊತ್ತವನ್ನು ಪ್ರತಿ 1 ಟನ್ ಮುರ ಇಟ್ಟಿಗೆಗೆ ಶೇ. 10% ಗೆ ನಿಗಿದಿಗೊಳಿಸಿ ರಾಜ್ಯದಲ್ಲಿ ವಿಪರೀತ ಪ್ರಮಾಣದಲ್ಲಿ ಏರಿಸಲಾಗಿರುವ ರಾಜಧನವನ್ನು ಈ ಕೂಡಲೇ ಜಾರಿಗೆ ಬರುವಂತೆ ತಗ್ಗಿಸಬೇಕಿದೆ. ಸದ್ಯ ಸ್ಥಗಿತವಾಗಿರುವ ಪರವಾನಿಗೆ ವಿತರಣಾ ಪ್ರಕ್ರಿಯೆಯನ್ನು ತಕ್ಷಣ ಪ್ರಾರಂಬಿಸಬೇಕು. ಇಲಾಖೆಗಗಳ ಅಧಿಕಾರಿಗಳು ಲಂಚಕ್ಕಾಗಿ ಪೀಡಿಸುವ ವ್ಯವಸ್ಥೆಗೆ ಕಡಿವಾಣ ಹಾಕಿ ಜನಸಾಮಾನ್ಯರಿಗೆ ಸುಲಭವಾಗಿ ಮಿತದರದಲ್ಲಿ ಮರಳು ಸಿಗುವಂತೆ ಕ್ರಮ ಕೈಗೊಳ್ಳಬೇಕು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಮತ್ತು ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ವಿಧಾನಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಕಿಶೋರ್ ಕುಮಾರ್ ಪುತ್ತೂರು, ಶಾಸಕರಾದ ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ವೇದವ್ಯಾಸ ಕಾಮತ್, ಡಾ ಭರತ್ ಶೆಟ್ಟಿ, ರಾಜೇಶ್ ನಾಯಕ್, ಭಾಗೀರಥಿ ಮುರುಳ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಯತೀಶ ಆರ್ವಾರ್, ಮಾಧ್ಯಮ ಪ್ರಕೋಷ್ಠದ ಸಂಚಾಲಕರಾದ ವಸಂತ ಪೂಜಾರಿ ಉಪಸ್ಥಿತರಿದ್ದರು.

Share News
Exit mobile version