ಮಂಗಳೂರು : ಜೆಜು ಕ್ರಿಸ್ತರ ಕಷ್ಟಾನುಭವ ಹಾಗೂ ಮರಣದ ಸ್ಮರಣೆಯ ‘ಶುಭ ಶುಕ್ರವಾರ’ದ ಪವಿತ್ರ ವಿಧಿವಿಧಾನಗಳನ್ನು ಪಂಜದ ಸಂತ ರೀಟಾ ಚರ್ಚ್ನಲ್ಲಿ ಅತ್ಯಂತ ಭಕ್ತಿಭಾವದಿಂದ ಆಚರಿಸಲಾಯಿತು. ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಪರಮ ಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಈ ಸಂಜೆಯ ಆರಾಧನಾ ವಿಧಿಯ ನೇತೃತ್ವ ವಹಿಸಿದ್ದರು.

ಈ ಪವಿತ್ರ ವಿಧಿಯು ಸಾಷ್ಟಾಂಗ ನಮನ, ಜೆಜು ಕ್ರಿಸ್ತರ ಕಷ್ಟಾನುಭವದ ವಾಚನ, ಜಗತ್ತಿನ ಕಲ್ಯಾಣಕ್ಕಾಗಿ ಪ್ರಾರ್ಥನೆ, ಪವಿತ್ರ ಶಿಲುಬೆಯ ಆರಾಧನೆ ಹಾಗೂ ಪರಮ ಪ್ರಸಾದ ಸ್ವೀಕಾರದ ವಿಧಿಗಳನ್ನು ಒಳಗೊಂಡಿತ್ತು.
ಜೆಜು ಕ್ರಿಸ್ತರ ಕಷ್ಟಾನುಭವದ ಕುರಿತು ಪ್ರಭಾವಿ ಚಿಂತನೆ (Reflection) ನಡೆಸಿದ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು, ಕ್ರೈಸ್ತ ಜೀವನದಲ್ಲಿ ಶಿಲುಬೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. “ಶಿಲುಬೆಯು ದೇವರ ಪ್ರೀತಿ ಮತ್ತು ಭರವಸೆಯ ಸಂಕೇತ” ಎಂಬ ವಿಷಯದ ಕುರಿತು ಮಾತನಾಡಿದ ಅವರು, “ಮಾನವಕುಲದ ಉದ್ಧಾರಕ್ಕಾಗಿ ದೇವರು ಎಂತಹ ದೊಡ್ಡ ತ್ಯಾಗಕ್ಕೂ ಸಿದ್ಧರಿದ್ದಾರೆ ಎಂಬುದಕ್ಕೆ ಕ್ರಿಸ್ತರ ಬಲಿದಾನವೇ ಸಾಕ್ಷಿ” ಎಂದರು.

”ನಾವು ಜೀವನದಲ್ಲಿ ಕಷ್ಟ-ಕಾರ್ಪಣ್ಯಗಳನ್ನು ಎದುರಿಸುವಾಗ, ದೇವರು ನಮ್ಮನ್ನು ಎತ್ತಿ ಹಿಡಿಯಲು ಸದಾ ನಮ್ಮೊಂದಿಗಿದ್ದಾರೆ ಎಂಬ ಭರವಸೆ ನಮಗಿರಲಿ. ಶಿಲುಬೆಯು ಸೋಲಿನ ಸಂಕೇತವಲ್ಲ, ಬದಲಾಗಿ ಅದು ಹೊಸ ಭರವಸೆಯ ದಾರಿದೀಪ. ಕ್ರಿಸ್ತನು ಶಿಲುಬೆಯ ಮೇಲೆ ಮರಣವನ್ನಪ್ಪುವ ಕ್ಷಣದಲ್ಲೂ ತಂದೆಯಾದ ದೇವರ ಅಪಾರ ಪ್ರೀತಿ ಮತ್ತು ಸಂಪೂರ್ಣ ಶರಣಾಗತಿಯನ್ನು ನಾವು ಕಾಣಬಹುದು,” ಎಂದು ಬಿಷಪ್ ಸಂದೇಶ ನೀಡಿದರು.

ನಾವು ಕ್ರಿಸ್ತನಿಗಾಗಿ ಜೀವನದಲ್ಲಿ ಎಂತಹ ತ್ಯಾಗ ಮಾಡಲು ಸಿದ್ಧರಿದ್ದೇವೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಅವರು ಕರೆ ನೀಡಿದರು. ಜೀವನದ ಕಷ್ಟಗಳಿಗೆ ಧೃತಿಗೆಡದೆ, ಶಿಲುಬೆಯ ಮೇಲಿರುವ ಯೇಸು ಕ್ರಿಸ್ತರನ್ನು ನೋಡಿ ಜೀವನದ ಸವಾಲುಗಳನ್ನು ಎದುರಿಸುವ ಶಕ್ತಿ ಪಡೆಯಬೇಕು ಎಂದು ಅವರು ಭಕ್ತಾದಿಗಳಿಗೆ ಕಿವಿಮಾತು ಹೇಳಿದರು.

ಪಂಜ ಚರ್ಚ್ನ ಧರ್ಮಗುರುಗಳಾದ ವಂದನೀಯ ಫಾದರ್ ಮೆಲ್ವಿನ್ ಜಾನ್ ಡಿಸೋಜಾ ಅವರು ಪವಿತ್ರ ವಿಧಿಗಳಲ್ಲಿ ಸಹಕರಿಸಿದರು. ಈ ಸಂದರ್ಭದಲ್ಲಿ ಧರ್ಮಕ್ಷೇತ್ರದ ಪಂಜ ಫಿರ್ಗಜಿನ ನೂರಾರು ಭಕ್ತಾದಿಗಳು ಪಾಲ್ಗೊಂಡು ಭಕ್ತಿ ಸಲ್ಲಿಸಿದರು.

ಚಿತ್ರಗಳು: ಪೂರ್ಣಚಂದ್ರ, ಪಂಜ

