ಅಶೋಕನಗರ, ಆಗಸ್ಟ್ 3: ಕ್ರಿಸ್ತರ ಶುಭವಾರ್ತೆಯನ್ನು ಪ್ರಸಾರ ಮಾಡಲು ಅವರ ಮೇಲೆ ವಿಶ್ವಾಸವಿರಬೇಕು. ಕ್ರಿಸ್ತರ ಮೂಲಕ ಸಕಲ ವಿಘ್ನಗಳಿಂದ ಪಾರಾಗಲು ಸಾಧ್ಯ ಎಂಬುವುದನ್ನು ಅರಿತುಕೊಳ್ಳಬೇಕು. ಪ್ರತೀಯೊಬ್ಬರೂ ಈ ಜತ್ತಿನಲ್ಲಿ ಪಯಣಿಗರಾಗಿದ್ದಾರೆ. ಸತ್ಯ, ನ್ಯಾಯ, ನೀತಿಯ ಮಾರ್ಗದಲ್ಲಿ ನಡೆಯುವುದು ಅಗತ್ಯವಾಗಿದ್ದು, ನಮ್ಮ ಪ್ರಾಮಾಣಿಕ ಜೀವನದ ಮೂಲಕ ಇತರರಿಗೂ ಮಾರ್ಗದರ್ಶಿಯಾಗಬೇಕು ಎಂದು ಸಂತ ಜೋಸೆಫ್ ಸೆಮಿನರಿಯ ರೆಕ್ಟರ್ ವಂ| ರಾಜೇಶ್ ಮೆಲ್ವಿನ್ ರೊಸಾರಿಯೋ ಹೇಳಿದರು.
ಮಂಗಳೂರಿನ ಅಶೋಕನಗರದ ಸಂತ ಡೊಮಿನಿಕ್ ಚರ್ಚ್ನಲ್ಲಿ ರವಿವಾರ ವಾರ್ಷಿಕ ಮಹೋತ್ಸವದ ಬಲಿಪೂಜೆಯಲ್ಲಿ ಅವರು ಪ್ರವಚನ ನೀಡಿದರು.
ಇಂದಿನ ಜಗತ್ತಿನಲ್ಲಿ ಹೊಸ ಹೊಸ ಅವಕಾಶಗಳು ನಮ್ಮ ಯೋಚನೆಗಳ ದಿಶೆಯನ್ನು ಬದಲಾಯಿಸುವ ಸಾಧ್ಯತೆ ಅಽಕವಾಗಿದೆ. ಅಗತ್ಯ ವಿಚಾರಗಳು ಅನಗತ್ಯವೆಂದು ಭಾಸವಾಗುತ್ತದೆ. ಇಂದಿನ ಕಾಲಘಟ್ಟಕ್ಕೆ ಅವುಗಳು ಸೀಮಿತವಾಗುವುದಿಲ್ಲ ಎನ್ನುವ ಯೋಚನೆಗಳು ಹುಟ್ಟಿಕೊಳ್ಳುತ್ತವೆ. ಆದರೆ, ಕ್ರಿಸ್ತರ ಶುಭವಾರ್ತೆ ಎಂದಿಗೂ ಹಳೆಯದಾಗುವುದಿಲ್ಲ. ಅದನ್ನು ಸ್ವೀಕರಿಸಲು ಧೈರ್ಯ ಅಗತ್ಯವಾಗಿದ್ದು, ಅಂತಹ ಧೈರ್ಯ ಮೈಗೂಡಿಸಿಕೊಳ್ಳಲು ಸಂತ ಡೊಮಿನಿಕ್ ಅವರ ಮೂಲಕ ಕ್ರಿಸ್ತರ ಆಶೀರ್ವಾದ ಬೇಡಿಕೊಳ್ಳುವುದು ಅಗತ್ಯ. ಭರವಸೆ ಎಂದಿಗೂ ನಮ್ಮನ್ನು ನಿರಾಸೆಗೊಳಿಸುವುದಿಲ್ಲ ಎಂದರು.
ಬಲಿಪೂಜೆಗೂ ಮೊದಲು ಚರ್ಚ್ನಲ್ಲಿ ಅಳವಡಿಸಲಾಗಿರುವ ನೂತನ ಶಿಲುಬೆಯ ಆಶೀರ್ವಚನ ನಡೆಯಿತು. ವಾರ್ಷಿಕ ಹಬ್ಬದ ಸಮಯದಲ್ಲಿ ನೆರವಾದವರಿಗೆ ಮೊಂಬತ್ತಿಗಳನ್ನು ವಿತರಿಸಲಾಯಿತು.
ಚರ್ಚ್ನ ಪ್ರಧಾನ ಧರ್ಮಗುರು ವಂ|ಡಾ| ಡೇನಿಯಲ್ ವೇಗಸ್, ಸಹಾಯಕ ಧರ್ಮಗುರು ವಂ| ಮೆಕೇಂಝಿ ಮೆಂಡೋನ್ಸಾ, ಉರ್ವ ಚರ್ಚ್ನ ಧರ್ಮಗುರು ವಂ| ಬೆಂಜಮಿನ್ ಪಿಂಟೊ, ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕರಾದ ವಂ| ವಿಲ್ರೆಡ್ ಪ್ರಕಾಶ್ ಡಿ’ಸೋಜಾ, ವಂ| ಫ್ರಾನ್ಸಿಸ್ ಅರುಣ್ ಡಿ’ಸೋಜಾ, ವಂ| ವಿಜಯ್, ವಂ| ರೋಶನ್, ವಂ| ದೀಪ್ ಫೆರ್ನಾಂಡಿಸ್ ಮತ್ತಿತರರು ಭಾಗವಹಿಸಿದ್ದರು.
