ಮಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸತತವಾಗಿ ಹಿಂದೂ ವಿರೋಧಿ ಹಾಗೂ ಅರಾಜಕತೆಯ ನೀತಿಯನ್ನು ಅನುಸರಿಸುತ್ತಿರುವುದನ್ನು ಜಿಲ್ಲಾ ಬಿಜೆಪಿ ಯುವ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ. ಸಮಾಜಘಾತುಕ ಶಕ್ತಿಯಾದ PFI ಸಂಘಟನೆಯ 1,600 ಕ್ಕೂ ಹೆಚ್ಚು ಕಾರ್ಯಕರ್ತರ ಮೇಲಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಸ್ ಪಡೆಯುವ ಮೂಲಕ ಉಗ್ರಗಾಮಿ ಮನಸ್ಥಿತಿಗೆ ಕುಮ್ಮಕ್ಕು ನೀಡುತ್ತಿರುವ ಈ ಸರ್ಕಾರ, ದೇಶಭಕ್ತ ಹಿಂದೂ ಕಾರ್ಯಕರ್ತರ ದಮನಕ್ಕೆ ಮುಂದಾಗಿರುವುದು ಅತ್ಯಂತ ಶೋಚನೀಯ. ಇತ್ತೀಚೆಗೆ ಉಡುಪಿ ಪರ್ಯಾಯ ಮಹೋತ್ಸವದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಶತಮಾನಗಳ ಸಂಪ್ರದಾಯದಂತೆ ಭಗವಾಧ್ವಜ ಹಾರಿಸಿ ಮೆರವಣಿಗೆಗೆ ಚಾಲನೆ ನೀಡಿದ್ದನ್ನು ವಿರೋಧಿಸಿ, ಅವರ ಮೇಲೆ ಕ್ರಮಕ್ಕೆ ಒತ್ತಾಯಿಸಿರುವುದು ಕಾಂಗ್ರೆಸ್ನ ಬೌದ್ಧಿಕ ದಿವಾಳಿತನ ಹಾಗೂ ಸನಾತನ ಧರ್ಮದ ಮೇಲಿನ ದ್ವೇಷಕ್ಕೆ ಸಾಕ್ಷಿಯಾಗಿದೆ. RSS ಸಂಘಟನೆಯು ತನ್ನ 100ನೇ ವರ್ಷದ ಸಂಭ್ರಮದಲ್ಲಿದ್ದು, ದೇಶಾದ್ಯಂತ ಸಾಂಸ್ಕೃತಿಕ ಜಾಗೃತಿ ಮೂಡಿಸುತ್ತಿರುವುದನ್ನು ಸಹಿಸದ ಸರ್ಕಾರ, ಪಥ ಸಂಚಲನಕ್ಕೆ ಅಡ್ಡಿಪಡಿಸುವುದು ಹಾಗೂ ಹಿಂದೂ ಸಮಾಜಕ್ಕಾಗಿ ಜೀವನವನ್ನೇ ಸವೆಸಿದ ಹಿರಿಯ ಮಾರ್ಗದರ್ಶಕರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರ ಮೇಲೆ ರಾಜಕೀಯ ಪ್ರೇರಿತ ಸುಳ್ಳು ಮೊಕದ್ದಮೆಗಳನ್ನು ದಾಖಲಿಸುತ್ತಿರುವುದು ಖಂಡನೀಯ. ರಾತ್ರಿ ವೇಳೆ ಹಿರಿಯ ನಾಯಕರ ಮನೆಗೆ ನುಗ್ಗಿ ಕಿರುಕುಳ ನೀಡುವುದು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮೂಲಕ ಈ ಸರ್ಕಾರವು ‘ಪೊಲೀಸ್ ರಾಜ್ಯ’ ನಿರ್ಮಾಣ ಮಾಡಲು ಹೊರಟಿದೆ. ಕರಾವಳಿಯ ಯಕ್ಷಗಾನ, ಕೃಷ್ಣ ಜನ್ಮಾಷ್ಟಮಿ ಹಾಗೂ ಸಾಂಪ್ರದಾಯಿಕ ಕೋಳಿ ಅಂಕ ಗಳಂತಹ ಧಾರ್ಮಿಕ ಆಚರಣೆಗಳಿಗೂ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್ ಸರ್ಕಾರದ ಈ ದೌರ್ಜನ್ಯಗಳನ್ನು ಜಿಲ್ಲಾ ಯುವ ಮೋರ್ಚಾ ಸಹಿಸುವುದಿಲ್ಲ ಮತ್ತು ಮುಂಬರುವ ದಿನಗಳಲ್ಲಿ ಇಡೀ ಹಿಂದೂ ಸಮಾಜವು ಈ ದಮನಕಾರಿ ನೀತಿಗೆ ತಕ್ಕ ಪಾಠ ಕಲಿಸಲಿದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಉಲ್ಲಾಳ್ ನಂದನ್ ಮಲ್ಯ ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
