canaratvnews

*ಕೇಂದ್ರದ ‘ವಿಬಿ ಜಿ ರಾಮ್ ಜಿ’ ಕಾಯ್ದೆ ಪರ ಬಿಜೆಪಿ ಬೃಹತ್ ಕಾಲ್ನಡಿಗೆ ಜಾಥಾ – ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಆಗ್ರಹ*

ಮಂಗಳೂರು: ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ವಿಬಿ ಜಿ ರಾಮ್ ಜಿ’ (VB-G RAM-G) ಕಾಯ್ದೆಯ ಬಗ್ಗೆ ಜನಜಾಗೃತಿ ಮೂಡಿಸಲು ಹಾಗೂ ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಜಿಲ್ಲಾ ಕಚೇರಿಯಿಂದ ಮಂಗಳೂರು ಮಹಾನಗರ ಪಾಲಿಕೆ ಕಚೇರಿಯವರೆಗೆ ಬೃಹತ್ ಕಾಲ್ನಡಿಗೆ ಜಾಥಾ ನಡೆಯಿತು.

ಭ್ರಷ್ಟಾಚಾರಕ್ಕೆ ಇಲ್ಲಿ ಆಸ್ಪದವಿಲ್ಲ – ಸತೀಶ್ ಕುಂಪಲ
ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು, “ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಕೇಂದ್ರದಿಂದ ಕಳುಹಿಸಿದ ಒಂದು ರೂಪಾಯಿಯಲ್ಲಿ ಜನರಿಗೆ ತಲುಪುತ್ತಿದ್ದುದು ಕೇವಲ ಕೆಲವು ಪೈಸೆ ಮಾತ್ರ ಎಂದು ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರೇ ಒಪ್ಪಿಕೊಂಡಿದ್ದರು. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಒಂದೇ ಒಂದು ರೂಪಾಯಿ ಭ್ರಷ್ಟಾಚಾರಕ್ಕೂ ಅವಕಾಶವಿಲ್ಲದಂತೆ ಪಾರದರ್ಶಕ ಆಡಳಿತ ನಡೆಯುತ್ತಿದೆ. ಇದರ ಮುಂದುವರಿದ ಭಾಗವೇ ‘ವಿಬಿ ಜಿ ರಾಮ್ ಜಿ’ ಕಾಯ್ದೆ. ಇದನ್ನು ವಿರೋಧಿಸಲು ಕಾರಣವಿಲ್ಲದೆ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ,” ಎಂದು ಟೀಕಿಸಿದರು.

ಬಡವರ ಹಿತಕ್ಕಾಗಿ ಕಾಯ್ದೆ; ಕಾಂಗ್ರೆಸ್‌ಗೆ ಅಸಹನೆ ಏಕೆ? – ಶಾಸಕ ವೇದವ್ಯಾಸ ಕಾಮತ್
ನಂತರ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, “ದುಡಿಯುವ ದಿನಗಳನ್ನು 100 ರಿಂದ 125ಕ್ಕೆ ಏರಿಸುವ ಮೂಲಕ ಬಡವರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡುತ್ತಿರುವ ಈ ಕಾಯ್ದೆಯನ್ನು ಕಾಂಗ್ರೆಸ್ ವಿರೋಧಿಸುತ್ತಿರುವುದು ಸರಿಯಲ್ಲ. ಮನರೇಗಾ ಹೆಸರಿನಲ್ಲಿ ನಡೆಯುತ್ತಿದ್ದ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರಕ್ಕೆ ಈ ಕಾಯ್ದೆ ತಡೆ ಹಾಕಲಿದೆ ಎಂಬ ಭಯ ಕಾಂಗ್ರೆಸ್ಸಿಗರ ಅಸಹನೆಗೆ ಕಾರಣವಾಗಿದೆ,” ಎಂದರು.
ಮುಂದುವರಿದು ಮಾತನಾಡಿದ ಅವರು, “ರಾಜ್ಯ ಸರ್ಕಾರದ ದುರಾಡಳಿತದಿಂದಾಗಿ ಇ-ಖಾತಾ ಸಿಗದೆ, ಕೆಂಪು ಕಲ್ಲು ಮತ್ತು ಮರಳಿನ ಕೊರತೆಯಿಂದ ಜನರು ಕಂಗಾಲಾಗಿದ್ದಾರೆ. ಕರಾವಳಿ ಭಾಗದ ಅಭಿವೃದ್ಧಿ ಮತ್ತು ಐಟಿ, ಆರೋಗ್ಯ ಕ್ಷೇತ್ರದ ಕೊಡುಗೆಯ ಬಗ್ಗೆ ಅರಿಯದ ಸಚಿವ ಪ್ರಿಯಾಂಕ್ ಖರ್ಗೆ ಅವರು ಮೊದಲು ತಮ್ಮ ಜಿಲ್ಲೆಯ ಸ್ಥಿತಿಯನ್ನು ನೋಡಿಕೊಳ್ಳಲಿ,” ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ತಿಲಕ್ ರಾಜ್ ಕೃಷ್ಣಾಪುರ, ಪೂರ್ಣಿಮಾ ಎಂ., ಸಂಜಯ್ ಪ್ರಭು, ಶಾನವಾಜ್, ಜಗನ್ನಾಥ್, ಸುಧೀರ್ ಶೆಟ್ಟಿ ಕಣ್ಣೂರು, ನಂದನ್ ಮಲ್ಯ, ವಸಂತ್ ಜೆ. ಪೂಜಾರಿ, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ವಿಜಯ್ ಕುಮಾರ್ ಶೆಟ್ಟಿ, ಅಶ್ವಿತ್ ಕೊಟ್ಟಾರಿ, ರಾಜಗೋಪಾಲ್ ರೈ ಹಾಗೂ ನಿಕಟಪೂರ್ವ ಪಾಲಿಕೆ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Share News
Exit mobile version