canaratvnews

*ರೊಸಾರಿಯೊ ಕೆಥೆಡ್ರಲ್‌ನಲ್ಲಿ ‘ಭರವಸೆಯ ಜುಬಿಲಿ ವರ್ಷ–2025’ ಸಮಾರೋಪ

ಮಂಗಳೂರು ಧರ್ಮಕ್ಷೇತ್ರದ ‘ಭರವಸೆಯ ಜುಬಿಲಿ ವರ್ಷ–2025’ ರ ಸಮಾರೋಪ ಸಮಾರಂಭವು ಇಂದು ಡಿಸೆಂಬರ್ 28ರಂದು ರವಿವಾರ ಮಂಗಳೂರಿನ ಅವರ್ ಲೇಡಿ ಆಫ್ ಹೋಲಿ ರೊಸಾರಿಯೊ ಕೆಥೆಡ್ರಲ್‌ನಲ್ಲಿ ಭಕ್ತಿಭಾವದಿಂದ ನೆರವೇರಿತು. ಪವಿತ್ರ ಕುಟುಂಬದ ಹಬ್ಬದ ದಿನದಂದೇ ಜುಬಿಲಿ ವರ್ಷದ ಸಮಾರೋಪ ವಿಧಿಗಳು ನಡೆದಿದ್ದು ವಿಶೇಷವಾಗಿತ್ತು.

ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಜುಬಿಲಿ ವರ್ಷದ ಸಮಾರೋಪದ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಧರ್ಮಕ್ಷೇತ್ರದ ಶ್ರೇಷ್ಠಗುರು ಅತೀ ವಂದನೀಯ ಮೊನ್ಸಿಂಜ್ಞೊರ್ ಮ್ಯಾಕ್ಸಿಮ್ ಎಲ್. ನೊರೊನ್ಹಾ, ಅತೀ ವಂದನೀಯ ಫಾದರ್ ಡೇನಿಯಲ್ ವೇಗಸ್ OP, ಅತೀ ವಂದನೀಯ ಫಾದರ್ ನವೀನ್ ಪಿಂಟೊ, ವಂದನೀಯ ಫಾದರ್ ವಲೇರಿಯನ್ ಡಿಸೋಜ, ಅತೀ ವಂದನೀಯ ಫಾದರ್ ಸಂತೋಷ್ ರೊಡ್ರಿಗಸ್, ಅತೀ ವಂದನೀಯ ಫಾದರ್ ರುಡಾಲ್ಫ್ ರವಿ ಡೆಸಾ, ವಂದನೀಯ ಫಾದರ್ ಅನಿಲ್ ಐವನ್ ಫೆರ್ನಾಂಡಿಸ್, ವಂದನೀಯ ಫಾದರ್ ಜೆ.ಬಿ. ಕ್ರಾಸ್ತಾ, ವಂದನೀಯ ಫಾದರ್ ವಲೇರಿಯನ್ ಫೆರ್ನಾಂಡಿಸ್ ಹಾಗೂ ವಂದನೀಯ ಫಾದರ್ ಜೇಸನ್ ಲೋಬೋ ಅವರು ಸಹ-ಬಲಿಪೂಜೆಯನ್ನು ನೆರವೇರಿಸಿದರು.
ಸಮಾರೋಪ ಸಮಾರಂಭದಲ್ಲಿ ಜುಬಿಲಿಗೆ ಸಂಬಂಧಿಸಿದ ವಿಶೇಷ ವಿಧಿವಿಧಾನಗಳನ್ನು ಆಚರಿಸಲಾಯಿತು. ವರ್ಷಪೂರ್ತಿ ಬಲಿಪೀಠದ ಬಳಿ ಇರಿಸಲಾದ ಅಲಂಕೃತ ಜುಬಿಲಿ ಶಿಲುಬೆ ಸಮಾರಂಭದ ಕೇಂದ್ರ ಸಂಕೇತವಾಗಿತ್ತು. ಜುಬಿಲಿ ವರ್ಷದ ಆಧ್ಯಾತ್ಮಿಕ ಪಯಣವನ್ನು ಸ್ಮರಿಸಿ ಚರ್ಚ್ ಹಾಗೂ ವಿಶ್ವ ಶಾಂತಿಗಾಗಿ ವಿಶೇಷ ಸಾರ್ವತ್ರಿಕ ಪ್ರಾರ್ಥನೆ ಸಲ್ಲಿಸಲಾಯಿತು. ಜುಬಿಲಿ ವರ್ಷದ ದಾನ–ಧರ್ಮದ ಸಂಕೇತವಾಗಿ ಬಡವರಿಗಾಗಿ ಸಂಗ್ರಹಿಸಲಾದ ಕಾಣಿಕೆಗಳನ್ನು ದಿವ್ಯ ಬಲಿದಾನದ ವೇಳೆ ಅರ್ಪಿಸಲಾಯಿತು. ಇದೇ ಸಂದರ್ಭದಲ್ಲಿ, ಜುಬಿಲಿ ವರ್ಷದಲ್ಲಿ ದೊರೆತ ಕೃಪೆ ಹಾಗೂ ಪಾಪಕ್ಷಮೆಗಾಗಿ ಬಿಷಪ್ ಅವರ ನೇತೃತ್ವದಲ್ಲಿ ಇಡೀ ಸಭೆಯು ‘Te Deum’ ಕೃತಜ್ಞತಾ ಗೀತೆಯನ್ನು ಹಾಡಿತು.
ತಮ್ಮ ಪ್ರವಚನದಲ್ಲಿ ಧರ್ಮಾಧ್ಯಕ್ಷರು “ಜುಬಿಲಿ ವರ್ಷದ ಆಚರಣೆಗಳು ಇಂದು ಮುಕ್ತಾಯಗೊಂಡರೂ ನಮ್ಮೊಳಗಿನ ಭರವಸೆ ಎಂದಿಗೂ ಕೊನೆಗೊಳ್ಳಬಾರದು. ನಮ್ಮ ನಂಬಿಕೆ ನಮಗೆ ಸದಾ ಭರವಸೆಯ ದಾರಿ ತೋರಬೇಕು,” ಎಂದು ಹೇಳಿದರು. ಪ್ರತಿಯೊಂದು ಕುಟುಂಬವೂ ಕರುಣೆ, ದಯೆ, ನಮ್ರತೆ ಹಾಗೂ ತಾಳ್ಮೆಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹಿತವಚನ ನೀಡಿದರು.
ಜುಬಿಲಿ ವರ್ಷದ ಅಂಗವಾಗಿ ಧರ್ಮಕ್ಷೇತ್ರದ ಎಂಟು ಪುಣ್ಯಕ್ಷೇತ್ರಗಳಲ್ಲಿ ಭಕ್ತರಿಗೆ ಪಾಪಕ್ಷಮೆಯ ವಿಶೇಷ ಅವಕಾಶ ಕಲ್ಪಿಸಲಾಗಿತ್ತು. ಈ ಆಧ್ಯಾತ್ಮಿಕ ಅನುಭವದ ಬೆಳಕಿನಲ್ಲಿ ಭಕ್ತರು ತಮ್ಮ ದೈನಂದಿನ ಬದುಕಿನಲ್ಲಿ ಇತರರಿಗೆ ಭರವಸೆಯ ಸಾಕ್ಷಿಗಳಾಗಬೇಕು ಎಂದು ಬಿಷಪ್ ಅವರು ಕರೆ ನೀಡಿದರು. ಮಂಗಳ ಜ್ಯೋತಿ ನಿರ್ದೇಶಕರಾದ ವಂದನೀಯ ಫಾದರ್ ರೋಹಿತ್ ಡಿಕೋಸ್ಟಾ ಅವರು ದಿವ್ಯ ಬಲಿಪೂಜೆಯ ಸಂಪೂರ್ಣ ಕಾರ್ಯಕ್ರಮವನ್ನು ನಿರ್ವಹಿಸಿದರು.

Share News
Exit mobile version