canaratvnews

ಪತ್ರಕರ್ತ ಗುರುವಪ್ಪ ಎನ್.ಟಿ. ಬಾಳೇಪುಣಿ ಸ್ಮರಣಾರ್ಥ ದತ್ತಿನಿಧಿ ವಿತರಣೆ: ಎಜು ಕಾರುಣ್ಯ ಟ್ರಸ್ಟ್ ಕಾರ್ಯ ಶ್ಲಾಘನೀಯ – ಪ್ರಶಾಂತ್ ಕಾಜವ

ಮಂಗಳೂರು: ಜೂನ್,26 :ಪ್ರಾಮಾಣಿಕ, ನೇರ ಮತ್ತು ನಿಷ್ಠುರ ಪತ್ರಕರ್ತರಾಗಿದ್ದ ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ.ಬಾಳೇಪುಣಿಯವರ ಸ್ಮರಣಾರ್ಥ ದತ್ತಿ ನಿಧಿ ಯೋಜನೆ ಆರಂಭಿಸಿರುವ ಎಜು ಕಾರುಣ್ಯ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯ ಸಮಾಜಕ್ಕೆ ಪ್ರೇರಣಾದಾಯಿ ಎಂದು ನರಿಂಗಾನ ಕಂಬಳೋತ್ಸವ ಸಮಿತಿಯ ಅಧ್ಯಕ್ಷ ಪ್ರಶಾಂತ್ ಕಾಜವ ಶ್ಲಾಘಿಸಿದರು.
ಮಂಗಳೂರಿನ ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ ಶುಕ್ರವಾರ ಎಜುಕಾರುಣ್ಯ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಮಂಗಳೂರು ವತಿಯಿಂದ ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ. ಬಾಳೇಪುಣಿಯವರ ಸ್ಮರಣಾರ್ಥ ಆಯೋಜಿಸಿದ್ದ ದತ್ತಿನಿಧಿ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ

ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ೧.೫೦ ಲಕ್ಷ ರೂ. ಮೊತ್ತದ ದತ್ತಿನಿಧಿಯನ್ನು ವಿವಿಧ ಶಾಲೆ – ಕಾಲೇಜುಗಳ ಒಟ್ಟು ೯ ಮಂದಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು. ಸದಾ ಸಮಾಜ ಮುಖಿಯಾಗಿ ಯೋಚಿಸುತ್ತಿದ್ದ ಬಾಳೇಪುಣಿಯವರು ನ್ಯಾಯಕ್ಕಾಗಿ ಹೋರಾಟ ಮಾಡುವ ವ್ಯಕ್ತಿತ್ವವುಳ್ಳವ ರಾಗಿದ್ದರು. ಒಡನಾಡಿಯಾಗಿದ್ದು, ಶಾಲಾ – ಕಾಲೇಜುಗಳಲ್ಲಿಯೇ ನಿಷ್ಠುರವಾದಿಯಾಗಿದ್ದರು. ಅವರ ಹೆಸರಿನಲ್ಲಿ ಕಳೆದ ಎರಡು ವರ್ಷದಿಂದ ನೀಡುತ್ತಿರುವ ದತ್ತಿ ನಿಧಿ ಯೋಜನೆ ಮತ್ತಷ್ಟು ಮಂದಿಗೆ ಪ್ರೇರಣೆ ನೀಡುವಂತಾಗಲಿ ಎಂದರು.

ಉದ್ಯಮಿ ರಾಧಾಕೃಷ್ಣ ರೈ ಉಮಿಯ ಮಾತನಾಡಿ, ಬಾಳೇಪುಣಿಯವರ ವ್ಯಕ್ತಿತ್ವ ಮಾದರಿಯಾದುದು. ಪತ್ರಕರ್ತರಾಗಿದ್ದುಕೊಂಡು ಅವರು ಮಾಡಿದ ಕಾರ್ಯ ಸದಾ ನೆನಪಿನಲ್ಲಿ ಉಳಿಯುವಂತದ್ದು. ಅಕ್ಷರ ಸಂತ ಹರೇಕಳ ಹಾಜಬ್ಬರನ್ನು ಮೊದಲ ಬಾರಿಗೆ ಸಮಾಜಕ್ಕೆ ಪರಿಚಯಿಸಿದ ಹೆಗ್ಗಳಿಕೆ ಬಾಳೇಪುಣಿಯವರದ್ದು. ಅವರ ಹೆಸರಿನಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೆಲಸ ಎಜುಕಾರುಣ್ಯ ಟ್ರಸ್ಟ್ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ.ಖಾದರ್ ಶಾ ಮಾತನಾಡಿ, ಓರ್ವ ಉತ್ತಮ ಪತ್ರಕರ್ತರಾಗಿ ಮಾದರಿಯಾಗಿದ್ದ ಬಾಳೇಪುಣಿಯವರು ಜಿಲ್ಲೆಯಲ್ಲಿ ಹಲವು ಬದಲಾವಣೆಗೂ ಕಾರಣರಾಗಿದ್ದರು ಎಂದರು.
ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್ ಹಾಗೂ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಬಾಳೇಪುಣಿಯವರೊಂದಿಗಿನ ಒಡನಾಟದ ನೆನಪುಗಳನ್ನು ಹಂಚಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿ ಮಾತನಾಡಿ,ಬಾಳೇಪುಣಿಯವರದ್ದು ಆದರ್ಶ ವ್ಯಕ್ತಿತ್ವ. ತಮ್ಮ ಬದುಕಿನುದ್ದಕ್ಕೂ ಕೆಲವೊಂದು ಮೌಲ್ಯಗಳನ್ನು ಅಳವಡಿಸಿಕೊಂಡು ಅದಕ್ಕೆ ಬದ್ಧರಾಗಿ ಬೆಳೆದವರು. ಅವರ ಆಶಯದಂತೆ ಎಜುಕಾರುಣ್ಯ ಟ್ರಸ್ಟ್ ಕೂಡಾ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣದ ಮೂಲಕ ದೇಶವನ್ನು ಕಟ್ಟುವ ಕೆಲಸ ಮಾಡುತ್ತಿದೆ ಎಂದರು.
ಕಾವೂರು ವ್ಯವಸಾಯ ಸೇವಾಸಹಕಾರಿ ಸಂಘದ ಅಧ್ಯಕ್ಷ ಲೋಕೇಶ್ ಭಂಡಾರಿ, ಜನ ಶಿಕ್ಷಣ ಟ್ರಸ್ಟ್ ನ ಇನ್ನೋರ್ವ ನಿರ್ದೇಶಕ ಕೃಷ್ಣ ಮೂಲ್ಯ, ಕರಾವಳಿ ಕುರುಬರ ಸಂಘದ ಅಧ್ಯಕ್ಷ ನಿರಂಜನ್ ಎಲ್.ಆರ್. ಗಾಂಧಿನಗರ, ಟ್ರಸ್ಟ್ ನ ಪ್ರಧಾ ಕಾರ್ಯದರ್ಶಿ ರಮೇಶ್ ಶೆಟ್ಟಿ ಪಂಜಿಮೊಗರು, ಟ್ರಸ್ಟಿಗಳಾದ ಪ್ರಶಾಂತ್ ಅಬ್ಬೆಟ್ಟು, ದಿನೇಶ್ ನಾಯ್ಕ ಕಾಶಿಪಟ್ಣ, ಬಾಳೇಪುಣಿ ಅವರ ಪತ್ನಿ ಜಯಂತಿ ಬಾಳೇಪುಣಿ, ಪುತ್ರ ಮನೇಶ್ ಬಾಳೇಪುಣಿ, ಉಪಸ್ಥಿತರಿದ್ದರು.
ಟ್ರಸ್ಟ್ ಅಧ್ಯಕ್ಷ ಮೋಹನ್ ದಾಸ್ ಮರಕಡ ಪ್ರಸ್ತಾವಿಕವಾಗಿ ಮಾತನಾಡಿದರು.ಪತ್ರಕರ್ತ ಅನ್ಸಾರ್ ಇನೋಳಿ ಸ್ವಾಗತಿಸಿ, ಮಾನಸ ವಂದಿಸಿದರು. ಬಬಿತಾ ಎಂ. ಮರಕಡ ಕಾರ್ಯಕ್ರಮ ನಿರೂಪಿಸಿದರು.

Share News
Exit mobile version