ಮಂಗಳೂರು: ಇಂದಿನಿಂದ ವಿಶ್ವ ಕಥೋಲಿಕ ಕ್ರೈಸ್ತ ಸಮುದಾಯ ಬೂದಿ ಬುಧವಾರ (ಆ್ಯಶ್ ವೆಡ್ನಸ್ ಡೇ), ವಿಭೂತಿ ಬುಧವಾರ ಆಚರಿಸುತ್ತಾರೆ. ಅದರ ಭಾಗವಾಗಿ ಕರಾವಳಿಯ ಕಥೋಲಿಕ ಕ್ರೈಸ್ತ ಸಮುದಾಯ ಇಂದು ಬೆಳಗ್ಗೆಯಿಂದ ಬೂದಿ ಬುಧವಾರ ಆಚರಿಸಿದರು. ಈ ಮೂಲಕ ಕ್ರೈಸ್ತರು ಇಂದಿನಿಂದ ತಪಸ್ಸು ಕಾಲ ಆರಂಭಿಸುತ್ತಿದ್ದಾರೆ.

ಈ ಬೂದಿ ಬುಧವಾರದ ವಿಶೇಷತೆ ಎಂದರೆ ಎಲ್ಲ ಚರ್ಚ್ಗಳಲ್ಲಿ ಬುಧವಾರ ಬೆಳಗ್ಗೆ ಹಾಗೂ ಸಂಜೆ ವಿಶೇಷ ಪೂಜೆಯ ಜತೆಗೆ ಬೂದಿಯಲ್ಲಿ ಶಿಲುಬೆಯ ಚಿಹ್ನೆಯನ್ನು ಭಕ್ತರಿಗೆ ಹಾಕುವ ಮೂಲಕ ಕಪ್ಪು ದಿನದ ಆಚರಣೆಗೆ ಚಾಲನೆ ಸಿಗಲಿದೆ. ಕ್ರೈಸ್ತರು ಬುಧವಾರ ವಿಶೇಷವಾದ ಪ್ರಾರ್ಥನೆ, ಉಪವಾಸದ ಮೂಲಕ ಈ ದಿನವನ್ನು ವಿಶಿಷ್ಟವಾಗಿ ಆಚರಣೆ ಮಾಡುತ್ತಾರೆ. ಇನ್ನು 40 ದಿನಗಳ ಕಾಲ ಪ್ರಾರ್ಥನೆ, ತ್ಯಾಗದ ಬದುಕಿನ ಹಾದಿಯಲ್ಲಿ ಕ್ರೈಸ್ತರು ಸಾಗುತ್ತಾರೆ. ಈಸ್ಟರ್ ಹಬ್ಬದ ಮೂಲಕ ಈ ಕಪ್ಪು ದಿನಕ್ಕೆ ಪುರ್ಣ ವಿರಾಮ ಸಿಗಲಿದೆ.
ಫೆ. 22ರಿಂದ ಕ್ರೈಸ್ತರಿಗೆ ತಪಸ್ಸು ಕಾಲ ಆರಂಭ. ಬುಧವಾರದಂದು ಪ್ರಾರಂಭವಾಗುವ ಆಚರಣೆ 40 ದಿನಗಳವರೆಗೆ ಇರುತ್ತದೆ. ಇದನ್ನು ಬೂದಿ ಬುಧವಾರ ಅಥವಾ ಆ್ಯಷ್ ವೆನ್ಸ್ಡೇ ಎಂದು ಕರೆಯುತ್ತಾರೆ. ಅಂದರೆ ಈ ದಿನದಿಂದ ಗುಡ್ಫ್ರೈಡೇಯವರಿಗೆ ಕ್ರೈಸ್ತರು ತ್ಯಾಗ ಜೀವನ ನಡೆಸುತ್ತಾರೆ. ಮಾಂಸಾಹಾರದಿಂದ ದೂರವಿರುತ್ತಾರೆ. ಮಾದಕ ವಸ್ತುಗಳಿಂದ ದೂರವಿರುತ್ತಾರೆ. ಪಾರ್ಟಿಗಳು, ಔತಣ ಕೂಡಗಳನ್ನು ಏರ್ಪಡಿಸುವುದಿಲ್ಲ.
ಬೂದಿ ಬುಧವಾರದಂದು ಚರ್ಚ್ಗೆ ತೆರಳಿ ಯೇಸುವನ್ನು ಆರಾಧಿಸಿ ಪಾದ್ರಿ ಮುಂದೆ ಸಾಲಾಗಿ ನಿಲ್ಲುತ್ತಾರೆ. ಪಾದ್ರಿ ಬೂದಿ ಬಟ್ಟಲನ್ನು ಕೈಯಲ್ಲಿ ಹಿಡಿದು, ಅದರಿಂದ ಸ್ವಲ್ಪ ಬೂದಿ ತೆಗೆದು ಎಲ್ಲರ ಹಣೆಗೆ ಶಿಲುಬೆ ಆಕಾರದಲ್ಲಿ ಬರೆಯುತ್ತಾರೆ. ಮರಳಿನಿಂದ ಬಂದ ದೇಹವಿದು, ಮರಳಿಗೆ ಮಣ್ಣಿಗೆ ಸೇರುತ್ತದೆ ಎಂಬ ಅರ್ಥದ ಹಾಡುಗಳನ್ನು ಹೇಳುತ್ತಾರೆ. ಇದು ತ್ಯಾಗದ ಸಂಕೇತವಾಗಿದ್ದು, ಮೋಜು ಮಸ್ತಿಗೆ ಖರ್ಚು ಮಾಡುವ ದುಡ್ಡನ್ನು ಬಡಬಗ್ಗರಿಗೆ ದಾನ ಮಾಡಬೇಕು ಎಂಬ ಆಶಯ ಈ ಆಚರಣೆ ಹಿಂದಿದೆ. ದರ್ಪ, ದಬ್ಬಾಳಿಕೆ ಮರೆತು ಮನುಷ್ಯತ್ವವನ್ನು ಎತ್ತಿ ಹಿಡಿಯಲು ಬೂದಿ ಬುಧವಾರ ಆಚರಿಸುತ್ತಾರೆ.

