canaratvnews

ಮಹಾಲಿಂಗೇಶ್ವರ ದೇವಳಕ್ಕೆ ₹ 7ಲಕ್ಷ ಮೌಲ್ಯದ ಬೆಳ್ಳಿ ಛತ್ರಿ ಸಮರ್ಪಣೆ

ಪುತ್ತೂರು: ತಾಲ್ಲೂಕಿನ ಬಡಗನ್ನೂರು ಗ್ರಾಮದ ಪಡುಮಲೆ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಳದ ಪವಿತ್ರಪಾಣಿ ಕೇಶವ ಭಟ್ ಕೆ.ಕೂವೆತೋಟ ಮತ್ತು ಕೆ.ಶಾಂತಕುಮಾರಿ ದಂಪತಿ ಇಲ್ಲಿನ ಮಹಾಲಿಂಗೇಶ್ವರ ದೇವಳಕ್ಕೆ 2.640 ಕೆ.ಜಿ.ಯ, ₹ 7ಲಕ್ಷ ಮೌಲ್ಯದ ಬೆಳ್ಳಿ ಛತ್ರಿ (ಕೊಡೆ) ಯನ್ನು ಕೊಡುಗೆಯಾಗಿ ಶನಿವಾರ ನೀಡಿದರು.

ದೇವಳದ ಒಂದು ಕಟ್ಟೆಯ ಪುನರ್ ನಿರ್ಮಾಣಕ್ಕೆ ₹ 25 ಲಕ್ಷ ದೇಣಿಗೆ ನೀಡುವುದಾಗಿ ತಿಳಿಸಿದರು. ಪ್ರಸ್ತುತ ವಿಟ್ಲ ಧನ್ವಂತರಿ ನಿಲಯ ನಿವಾಸಿಯಾಗಿರುವ ಕೂವೆತೋಟ ಮನೆತನದ ಕೇಶವ ಭಟ್ ಕೆ.ಕೂವೆತೋಟ ಮತ್ತು ಕೆ.ಶಾಂತಕುಮಾರಿ ದಂಪತಿ ಶನಿವಾರ ದೇವಳದಲ್ಲಿ ಕುಂಟಾರು ರವೀಶ ತಂತ್ರಿ ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿಸಿ ಬೆಳ್ಳಿ ಛತ್ರಿಯನ್ನು ‌ಸಮರ್ಪಿಸಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ಕೇಶವ ಭಟ್ ದಂಪತಿಯನ್ನು ಗೌರವಿಸಿದರು. ಪ್ರಧಾನ ಅರ್ಚಕ ವಸಂತ ಕೆದಿಲಾಯ ಅವರು ದೇವರ ಪ್ರಸಾದ ನೀಡಿದರು.ಫೆ.21ರಂದು ನಡೆಯುವ ಶಿಲಾನ್ಯಾಸದ ವೇಳೆ ₹ 5 ಲಕ್ಷವನ್ನು ನೀಡುವುದಾಗಿ ತಿಳಿಸಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಈಶ್ವರ ಭಟ್, ವಿನಯ ಸುವರ್ಣ, ಪುತ್ತೂರು ನಗರಸಭೆಯ ನಿಕಟಪೂರ್ವ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್, ವಿನಯ ತಂತ್ರಿ, ಬೆಳ್ಳಿಯ ಛತ್ರಿ ನಿರ್ಮಾಣ ಮಾಡಿದ ಜನಾರ್ದನ ಆಚಾರ್ಯ ಕಾಟುಕುಕ್ಕೆ, ಪುತ್ತೂರು ಪರ್ಲಡ್ಕ ನಿವಾಸಿ ನಿರಂಜನ ಆಚಾರ್ಯ, ಕೇಶವ ದಂಪತಿಯ ಸಂಬಂಧಿಕ ರಾಧೇಶ್ಯಾಮ್ ಅಜೇಯನಗರ ಭಾಗವಹಿಸಿದ್ದರು.

Share News
Exit mobile version